Sunday, 14 December 2014

  ಚುಟುಕುಗಳು 
ಏಕಭಾವದಿ ಭಜಿಸು ವಿಷ್ಣುವನು
ಕಳೆಯಲವ ಆಯಾಸ ಕಷ್ಟವನು
ಸಿಗಲಾಶ್ರಯ ವಿಬುಧರಿಗೆ ರಾಯನಲಿ
ಭಕ್ತಿ ನೆಲೆಗೊಳ್ಳಲಿ ಶ್ರೀ ಹರಿಯಲಿ. //
ಮನವಿಲ್ಲದ ವ್ರತ ಸಮಯ ವ್ಯರ್ಥ
ಭಾವವಿಲ್ಲದೆ ಗಂಗೆ ಆದಾಳೆ ತೀರ್ಥ?
ಯಾಗ ಯಜ್ಞಕು ಹಿರಿದು ಭಕ್ತಿ
ನೀನಿರುವಲ್ಲೆ  ಅಡಿಯಿಡುವ ಮುಕ್ತಿ //
ಕೊನೆ ಗಳಿಗೆಯಲ್ಲಿ ಅಜಾಮಿಳನ ಬಾಯಿ
ಉಚ್ಚರಿಸಲೊಮ್ಮೆ ಶ್ರೀ ಹರಿಯನಾಮ
ಹರಿಯಿತು ಭವ ದೊರೆತು ವೈಕುಂಠ
ಹರನಕ್ಷಿಗೆ ಸುಟ್ಟುರಿದಂತೆ ಕಾಮ //
ಒಳಿತು ಕೆದುಕಗಳೆಲ್ಲ ಅರಿಯೆ ತಂದೆ
ನೀನೇ ಪ್ರೇರಣೆ ನನ್ನಲ್ಲಿ  ಕಾಯಕಕ್ಕೆ
ಹೊಣೆಗಾರ ನೀ ಫಣಿಭೂಷಣ  ಎನ್ನ
ಒಂದಪರಾಧ  ಹೆಚ್ಚೆ ನಿನ್ನ ವಿಷಕಂಠಕೆ.//
ಉಸಿರಾಟ ಒಳಹೊರಗೆ ಎನ್ನ ಜೀವ
ನಿರುತವೂ ಭಜಿಸು ಹರಿಯ ನಾಮ
ಹೊರಹೋದ ಉಸಿರೆಲ್ಲ ಒಳಸೇರ
ಬೇಕೆಂಬುದೇನಿಲ್ಲ ಜೀವ ನಿಯಮ. //
ರಾಮಕೃಷ್ಣರ ಭಕ್ತಿಗೆ ಹಲವು ರೂಪ
ಅಳುವರು, ನಗುವರು, ಮಾತನಾಡುವರು
ದೇವಿಯೊಡನೊಂದಾಗಿ ಭಾವದಲ್ಲಿ
ಉಣಿಸುವರು, ಉಣ್ಣದಿರೆ  ಕೋಪಗೊಳ್ಳುವರು. //
ತಾಯಿತಂದೆ ಗುರುಹಿರಿಯರಿಗೆ
ದ್ರೋಹಮಾಡುವವವನೇ  ಪಾಪಿ
ಗುರು ಅಗಸ್ತ್ಯನ ಹೊಟ್ಟೆಯ ಸೇರಿ
ಜೀರ್ಣವಾದನು ವಾತಾಪಿ //
ಶಾಸ್ತ್ರ ಅರಿತವರೇನು? ಶಸ್ತ್ರ ನುರಿತವರೇನು?
ವೇದವಿದನೇನು? ತರ್ಕದಿ ನಿಪುಣನೇನು ?
ಸಕಳವರಿತು ಸಕಲನಾದ ಶ್ರೀ ಹರಿಗೆ
ಹೃದಯದಿ ಎಡಕೊಡದವನೇಸು  ಸಾಧಿಸಲೇನು//
ಮಾಡಲೇನು? ಕೆಲಸ ಮಾಡದಿದ್ದರೇನು?
ಕೈಗೆತ್ತಿಕೊಳ್ಳುವ ಮುನ್ನ ಯೋಚಿಸಲು ತಪ್ಪೇನು?
ಮಾಡುವನು ಕೆಲಸ ಮಾಡದೆಯೂ ಇರುವನು
ಔಚಿತ್ಯ ಬಲ್ಲವನೇ ಜಾಣನು //
ಹೂಗಳನು ಹುಡುಕಿ ತಿಳಿಗೇಡಿಯಲೆದಾಟ
ಆಳಸರೋವರ ನಿರ್ಜನ ಬೆಟ್ಟಗುಡ್ಡ.
ಪಶುಪತಿಯೇ ನಿನ್ನಂಘ್ರಿಗಳಿಗೆ ತಮ್ಮ
ಹೃದಯಕಮಲವನರ್ಪಿಸದವನು ದಡ್ಡ.  //
ಗುರುಜನರ ನುಡಿ ನಿಷ್ಠುರ ಕಹಿ
ಜಿವ್ಹೆಗಹಿತ ಉದರಕ್ಕೋ ಸಿಹಿ.
ಸಾಣೆಗುಜ್ಜದ ರತ್ನಕೆಲ್ಲಿಯದು ಹೊಳಪು?
ಹಾದಿಬೀದಿಯ ಹರಳುಗಲ್ಲೇ ಸರಿ.//
ಹೆಚ್ಚುತ್ತಲಿಹರು ಗುರುಗಳಿಂಥವರು
ಶಿಷ್ಯರ ಹಣದ ಮೇಲಿವರ ಕಣ್ಣು
ಪಾಠಮಾಡದೆ ನೀತಿ ಹೇಳದೆ ಮಕ್ಕಳ
ಭವಿಷ್ಯವನ್ನು ಮಾಡುವರು ಮಣ್ಣು.//
ನಾವೆ ಮುರಿದಿದೆ ನದಿಯಲಿ ಮೊಸಳೆ ತುಂಬಿದೆ
ಬೀಸುತಿದೆ ಭಾರಿ ಬಿರುಗಾಳಿ
ಕತ್ತೆಲೆ ರಾತ್ರಿ ಬೆಳಕಿನ ಕರೆ ಬೇರೆ
ನಾವಿಕನ ಭುಜಬಲದಿ ನಂಬಿಕೆಯ ತಾಳಿ .//
****
ಹುಟ್ಟಿದ ನದಿ ಹಿರಿದೇನು ಕಿರಿದೇನು?
ಎಂಗದೆಲ್ಲೂ ಮುಂದಕ್ಕೆ ಹರಿಯಬೇಕು
ಜೊತೆ ಸೇರಿಕೊಂಡು ಸೇರಿಸಿಕೊಂಡು ನಿಲ್ಲದೆ
ಶರದಿಯೆದೆಯಲೊಂದಾಗಿ ಬೆರೆಯಬೇಕು. //
ತರ್ಕದ ಮಾತೊಂದು ಕರ್ಕಶ
ವ್ಯಾಕರಣದ ನುಡಿಯು ಶುಷ್ಕ.
 ದೇವನರಿಯಲು ಬೇಕು ನರನ
ಭಾವಲೋಕ ನಿಷ್ಕಲ್ಮಷ. //
ಭಕ್ತಿಯೊಂದೇ ಸಾಕು ಭಗವಂತನಲ್ಲಿ, ಕಳೆವುದು
ಸುಖ ದುಃಖ, ಅಜ್ಞಾನ, ಜನನ ಮರಣ.
ಸಪ್ತ ಸಾಲವೃಕ್ಷ ಬೆಟ್ಟ ಪಾತಾಳವನು
ಏಕಕಾಲಕೆ ಭೇದಿಸಿತು ಶ್ರೀ ರಾಮಬಾಣ //
ಮಂಜಿನಾವರಣ ನೆಲಕೆ
ಸೂರ್ಯನೇರಲು  ನಭಕೆ
ಮುತ್ತಿನಾಭರಣದ ಮೆರಗು
ಮಂದಾರ ಕುಸುಮದ ಮೊಗಕೆ.//
ಭಕ್ತಿ ಜ್ಯೋತಿಯ ಹಾಗೆ ಕಳೆವುದು ಕತ್ತಲೆಯ
ಬಿರುಗಾಳಿಯಿಂದದನು ಕಾಪಾಡಬೇಕು.
ನಿಷ್ಠೆ ತೈಲವನೆರೆದು, ನೇಮ ಬತ್ತಿಯ ಹೊಸೆದು
ಎದೆಗೂಡೊಳಿಟ್ಟು ಬೆಳಕ ಪಡೆಯಬೇಕು. //
ಮನಸಿಜವು ಮನದಲ್ಲಿ ಮುಪ್ಪಾದವು
ಅಂಗಮದವಿಂಗಿ ಅಲ್ಲೇ ಮರೆಯಾದವು
ಹೊಂಚಿದ್ದ ಕಾಲ ಮಿಂಚಂತೆ ಬಡಿಯೆ
ಮನ್ಮಥ ವೈರಿ ಶಿವಪಾದ ಗತಿಯಾದವು.//
ವನವಾಸಿ ಶಿವ, ಭಕ್ತರುಪವಾಸಿ ಶಿವ,
ನಿನಗೆನ್ನ ನಮನ ಕಾಮಾಂತಕ
ಸೂಕ್ಷ್ಮನೂ, ಸ್ಥೂಲನೂ, ಹಿರಿಯನು, ಕಿರಿಯನೂ
ನೀನೆನ್ನೆದೆಯಲಿರಲೆನಗೆ ಆವ ಆತಂಕ.//
ಶಿವನು ಮಂಗಳಕರನು ಮಸಣವಾಸಿ
ನಾಗಭೂಷಣನವ ಗಜಚರ್ಮಾಂಬರ
ಕೆಸರಿಂದ ಮೇಲೆದ್ದು ಪಾಚಿಗಟ್ಟಿದ ನೀರ
ನಡುವೆ ಅರಳಿದ ಕಮಲವೆನಿತು ಸುಂದರ. //
ವಿಷಯಸುಖದೊಲಡಗಿದೆ ವಿಷವು
ವಿಷಮದೊಳಗೆಂದೂ ಒದಗದದು.
ಬಂಧನಕು ಬಿಡುಗಡೆಗು ಒಂದೆ ಕಾರಣನಾದ
ಬಂಧುವನು ಎಡಬಿಡದೆ ಭಜಿಸುವುದು.//
ಬಾಲಕೃಷ್ಣ ನೀ ಓಡಿಬೀಳಲು ಅಳುತ
ಕೈ ಹಿಡಿದೆತ್ತಲು ತಾಯ ಕರೆವೆಯಲ್ಲ.
ಸಂಸಾರದಲಿ ಬಿದ್ದು ನೊಂದವರ ಕರೆಯ
ಕೇಳದೆ ಇಬ್ಬಂದಿತನ ತೋರುವೆಯಲ್ಲ.//
ಎಲೈ ಮನವೇ, ನೀನೆಷ್ಟು ಚಂಚಲ?
ಆಗಸಕೆ ನೆಗೆದು ಮರು ಕ್ಷಣಕೆ ಪಾತಾಳ
 ಸ್ಮರಿಸದಿರುವೆ ನಿನ್ನೊಳಗೆ  ಕುಳಿತಿರುವ
ಪರಬ್ರಹ್ಮನನು ಒಂದೇ ಒಂದು ಸಲ.//
ಮತ್ತೆ ಮತ್ತೆ ಜನನ, ಮತ್ತೆ ಮರಣ
ಮತ್ತೆ ತಾಯ ಗರ್ಭದಲ್ಲಿ ಶಯನ
ಮತ್ತೆಂದು ಮುಕ್ತಿ ಜೀವ ಚಕ್ರದಿಂದ? ಕರ
ವೆತ್ತಿ ಬೇಡುವೆ ತೋರಯ್ಯ ಕರುಣ. //
ಬಾರನಂತೆ ಯಮನಿವರ ಗೊಡವೆಗೆ
ಗೀತೆಯನಿನಿತು ಓದಿದವನ, ಗಂಗಾ
ಮಾತೆಯನು ಇನಿತು ಸೇವಿಸಿದವನ, ತುಳಸಿ
ದಳವನರ್ಪಿಸಿ ಹರಿಯ ಪೂಜಿಸಿದವನ. //
ಹಲಬಗೆಯ ದೋಷಗಳಿದ್ದರೂ ಭಕ್ತಿ
ಪರವಶನಾಗೆ ಆಗುವನವನು ಪೂಜ್ಯ.
ಎಲೆತುಂಬ ಮುಳ್ಳು ಎದೆಯಲ್ಲೇ ಹಾವು
ಹರಿಪಾದ ಹೊಂದುವುದು ಕೇದಿಗೆಯ ಭಾಗ್ಯ.//
****
ಈ ಜಗವೆಲ್ಲ ಅವನ ಅಧೀನ
ದುಃಖಿಸದಿರು ನೀನಾರಿಗಾಗಿಯೂ
ಇತ್ತವನು ಕಿತ್ತು ಕೊಂಬುವನು
ದುಃಖ ಯಾಕೆ ಅರಿವ ಹೊರತಾಗಿಯೂ //
ಮದಮತ್ಸರ ಮೋಹ ಮೃಗಗಳು ಸೇರಿ
ಕಾಡಗಿದೆ ಎನ್ನ ಮನ ಆದಿ ಕಿರಾತ
ಬಂದಿಲ್ಲಿ ನೆಲೆಸಯ್ಯ ನಿತ್ಯ ನಿರಂತರ
ಬೇಟೆಯಾಡುವ ಸಂತಸವು ಖಂಡಿತ . //
ನೀರನೆರೆಯೆ ಬೇರಿಗೆ ಕೊಂಬೆರೆಂಬೆ
ಪತ್ರ ಫಲಪುಷ್ಪ ತೃಪ್ತ
ಪರಮಾಪ್ತ ಪರಮಾತ್ಮನನು  ಭಜಿಸೆ
ಜನುಮ ಜೀವ ಕೋಟಿ ಸಂತೃಪ್ತ //
ಎನ್ನಂಗಗಳಲಿ ಮನವೆಣಿಸದು ಭೇದ
ಕೈಕಾಲು ಕಣ್ಣು ಕಿವಿ ತಲೆ.
ಸರ್ವಜೀವಕು ದೇವನಿತ್ತಿಹನು ನೆಲೆ
ಬ್ರಹ್ಮಸೃಷ್ಟಿಯಲಿ ಎಲ್ಲದಕು ಬೆಲೆ.//
ಶಿರಬಾಗಿ ಬೇಡುವೆನು ಕರುಣಿಸು ದೇವ
ಎನಗತಿಮುಖ್ಯವಿದು ತಿಳಿದುಕೋ
ಜನ್ಮಜನ್ಮಾಂತರದಿ ನಿನ್ನ ಚರಣಸ್ಮರಣೆ
ಎನಗಿರಲೆಂದು ಪುಸ್ತಕದಿ ಬರೆದುಕೋ //
ಮರವೆಂದು ಭಾವಿಸಿ ಬೇಡಿದೆ ನಿನ್ನ
ಇತ್ತೆ ನೀನೆನಗೆ ವರದ ಫಲ.
ಭಾವಿಸದೆ ಬೇಡದೆ ಸುಮ್ಮನಿರಲು
ನೀನು ಎನಗಾದೆ ಬರದ ನೆಲ.//
ನದಿಗಳೆಲ್ಲೇ ಇರಲಿ ಹರಿದು
ಕೊನೆಗೆ ಸೇರುವುದೊಂದೆ ಶರಧಿ.
ಹಲನಾಮದಲಿ ಸ್ಮರಿಸೆ ಅವನ
ಹೂಮಾಲೆ ಹೊಳೆವುದು ಹರಿಯ ಉರದಿ.//
ಶಕ್ತಿಯಡಗಿದೆ ಜಡದಿ ಹಲವು ರೂಪ
ಬೆಂಕಿ, ಬೆಳಕು, ಬೆಚ್ಚನೆಯ ಹಿತಗಾಳಿ
ಜೀವಚೇತನ ಅವನೇ ಹಲವು ರೂಪ
ಭೇದಕೆಡೆಯಿಲ್ಲ ಸಮರಸದಿ ಬಾಳಿ.//
ಶರಧಿಯಲಿ ಬಿದ್ದು ಈಜಾಡುವವಗೆ
ನೀಡೀತೆ ಬಾವಿಯ ಆಳ ಸುಖವ?
ಭಕ್ತಿಯೆಂಬ ಅಮೃತ ಸಾಗರದಿ ಈಜಲು
ಲೌಕಿಕದ ಮಿಂದಾಟ ನೀಡೀತೆ ಹಿತವ?//
ಭೂತದ ಹೊರೆ ಭವಿಷ್ಯದ ಕರೆ
ಹೊತ್ತು ಸಾಗುತಿದೆ ವರ್ತಮಾನ.
 ಕಳೆಯಲಾರದು ಹಲಜನ್ಮವೆತ್ತರೂ
ಋಣಸಂದಾಯವೆ ಜೀವಮಾನ //
ನಗದವ ಬಾಯಲ್ಲಿ ನಗುವಿನುಪದೇಶ
ಏನು ಆಶ್ಚರ್ಯ ಎಂಥ ವಿಪರ್ಯಾಸ?
ಮೊಗ್ಗಲ್ಲೇ ನಿಂತ ಕಾಲ ಮತ್ತೆ ಅರಳಿ
ಮೂಡಲಿ ವದನದಲಿ ಮಂದಹಾಸ. //









































No comments:

Post a Comment